ಎತ್ತಿನಗಾಡಿಯಲ್ಲಿ ಬರುವಾಗ ವಿದ್ಯುತ್ ಸ್ಪರ್ಶ: ಎತ್ತು ಸೇರಿ ಇಬ್ಬರು ರೈತರ ಸಾವು | Janata news
ಯಾದಗಿರಿ : ಸೋಮವಾರ ಸಂಜೆ ಜಮೀನಿನಲ್ಲಿ ಕೆಲಸ ಮುಗಿಸಿ ಮನೆಗೆ ಬರುತ್ತಿರುವ ವೇಳೆ ಆಕಸ್ಮಿಕ ವಿದ್ಯುತ್ ತಗುಲಿ ಎತ್ತಿನೊಂದಿಗೆ ಇಬ್ಬರು ಸಾವನ್ನಪ್ಪಿದ ಘಟನೆ ಜರುಗಿದೆ.
ವಿದ್ಯುತ್ ಸ್ಪರ್ಶದಿಂದ ಎತ್ತು ಹಾಗೂ ಇಬ್ಬರು ಗ್ರಾಮಸ್ಥರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಜಿಲ್ಲಯ ವಡಗೇರ ತಾಲೂಕಿನ ಬೆಂಡೆಬೆಂಬಳಿ ಗ್ರಾಮದ ಸಮೀಪವಿರುವ ಜಮೀನಿನಲ್ಲಿ ನಡೆದಿದೆ.
ಗ್ರಾಮದ ನಿವಾಸಿಗಳಾದ ಮೌಲಾಲಿ(30) ಹಾಗೂ ಬಸಪ್ಪ(30) ಎತ್ತಿನ ಗಾಡಿಯಲ್ಲಿ ಹೊಲದಿಂದ ಬರುವಾಗ ಜಮೀನಿಗೆ ಹಾಕಿದ್ದ ವಿದ್ಯುತ್ ತಂತಿ ಬೇಲಿಗೆ ಗಾಡಿ ಸ್ಪರ್ಶವಾಗಿದೆ. ವಿದ್ಯುತ್ ತಂತಿ ಸ್ಪರ್ಶವಾಗಿದ್ದರಿಂದ ಬಂಡಿಯ ಎತ್ತು ಒದ್ದಾಡಲು ಪ್ರಾರಂಭಿಸಿತು. ಎತ್ತನ್ನು ರಕ್ಷಿಸಲು ಹೋದ ಇಬ್ಬರಿಗೆ ವಿದ್ಯುತ್ ತಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಜಾನುವಾರಿನೊಂದಿಗೆ ಮುನ್ನಗೌಡನ ಜಮೀನು ದಾಟುತ್ತಿರುವ ಸಂದರ್ಭದಲ್ಲಿ ಅವರ ಕೃಷಿ ಪಂಪ್ ಸೆಟ್ ವಿದ್ಯುತ್ ಸರ್ವಿಸ್ ವೈರ್ ಕಡಿದು ತಂತಿ ಬೇಲಿನ ಮೇಲೆ ಬಿದ್ದಿತ್ತು ಎನ್ನಲಾಗಿದೆ.
ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಸ್ಥಳಕ್ಕೆ ಜೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.